ಶುಕ್ರವಾರ, ಮಾರ್ಚ್ 24, 2023

ಏಕಾತ್ಮವಾದವೇ ವೇದಾಂತಸಿದ್ಧಾಂತ

ದ್ವೈತಿಗಳು ಅದ್ವೈತವನ್ನು ಟೀಕಿಸುತ್ತಾ ಅದ್ವೈತಿಗಳಿಗೆ ನೀವು ಒಂದೇ ವಸ್ತುವಿಗೆ ( ಏಕಾತ್ಮಸಿದ್ಧಾಂತಕ್ಕೆ)  ಜೋತುಬಿದ್ದಿದ್ದು  ತಪ್ಪು ಎನ್ನುತ್ತಾರೆ.. ಆದರೆ ಶಾಸ್ತ್ರ ರೀತ್ಯಾ ಅದು ಸರಿಯಲ್ಲ 
'ಇದಂ ಸರ್ವಂ ಯದಯಮಾತ್ಮಾ', 'ಆತ್ಮವೇದಂ ಸರ್ವಂ', 'ಸರ್ವಂ ಖಲ್ವಿದಂ
ಬ್ರಹ್ಮ' ಇತ್ಯಾದಿ ನೂರಾರು ಶ್ರುತಿವಾಕ್ಯಗಳು ಸಕಲವೂ ಆತ್ಮನೇ, ಆತ್ಮನನ್ನು ಬಿಟ್ಟು
ಇನ್ನೊಂದು ವಸ್ತುವಿಲ್ಲವೆಂದು ಸಾರುತ್ತವೆ. ಹೀಗೆ ಅಭೇದಶ್ರುತಿ ಗಳಿರುವಂತೆ 'ದ್ವಾ
ಸುಪರ್ಣಾ ಸಯುಜಾ ಸಖಾಯಾ' ಇತ್ಯಾದಿ ಕೆಲವೇ ಕೆಲವು ಭೇದಶ್ರುತಿಗಳೂ ಉಂಟು. ಆದ್ದರಿಂದ
ಏಕಾತ್ಮವಾದವು ಹೇಗೆ ಸಿದ್ದಾಂತವಾಗಿ ನಿಂತೀತು? ಎಂಬ ಪ್ರಶ್ನೆ ಸಹಜವಾಗಿ
ಹುಟ್ಟಿಕೊಳ್ಳುತ್ತದೆ. ಅದಕ್ಕೆ ಸಮಾಧಾನವನ್ನು ಈ ಪ್ರಕಾರವಾಗಿ ಹೇಳಬಹುದು.
೧. ಶಾಸ್ತ್ರವು ಅಜ್ಞಾತಜ್ಞಾಪಕ ಎಂಬುದು ಎಲ್ಲರೂ ಒಪ್ಪಿರುವ ಸಿದ್ಧಾಂತ. ಯಾವುದು ಇಂದ್ರಿಯ
ಗೋಚರವಲ್ಲವೋ ಸಾಮಾನ್ಯರ ಬುದ್ಧಿಗೆ ನಿಲುಕುವುದಿಲ್ಲವೋ ಅದನ್ನು
ತಿಳಿಸಿಕೊಡತಕ್ಕದ್ದು ಶಾಸ್ತ್ರ. ಇದು ವೇದಾಂತಕ್ಕೆ ಮಾತ್ರ ಸೀಮಿತವಲ್ಲ. ಸಾಂಖ್ಯಾದಿ
ಸಮಸ್ತ ಶಾಸ್ತ್ರಗಳಿಗೂ ಅನ್ವಯಿಸತಕ್ಕ ಮಾತು. ಭೇದವು ಲೋಕ ಸಿದ್ಧವಾಗಿದೆ.
ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ತಿರ್ಯಗ್‌ಜಂತುವಿಗೂ ಸಹ ನಾನು
ಬೇರೆ, ನೀನು ಬೇರೆ, ಈ ಪದಾರ್ಥವು ಬೇರೆ ಎಂಬ ಜ್ಞಾನ ಇದ್ದೇ ಇರುತ್ತದೆ.
ನಮ್ಮೆಲ್ಲರನ್ನು ಪಾಲಿಸತಕ್ಕ, ದಂಡಿಸತಕ್ಕ ದೇವರೊಬ್ಬನು ಆಕಾಶದಲ್ಲಿ
ಎಲ್ಲಿಯೋ ಇದ್ದಾನೆಂದು ಕಾಡು ಜನರೂ ತಿಳಿದಿದ್ದಾರೆ. ಇಂತಹ ದ್ವೈತವನ್ನು
ಶಾಸ್ತ್ರವು ಉಪದೇಶಿಸಬೇಕಾಗಿಲ್ಲ.
೨. ದ್ವೈತವೇ ಪರಮಾರ್ಥವಾದರೆ ಅಭೇದವನ್ನು ಬೋಧಿಸುವ ನೂರಾರು
ಶ್ರುತಿವಾಕ್ಯಗಳು ಏಕೆ ಹೊರಟವು? ಅವನ್ನು ಕ್ಲೇಶದಿಂದ ಜಗ್ಗಿ ಎಳೆದು ದ್ವೈತ
ವಿರೋಧವಿಲ್ಲವೆಂದು ಕಸರತ್ತು ಮಾಡಬೇಕಾದ ಸಂದರ್ಭವನ್ನು ಶ್ರುತಿಯು ಏಕೆ
ಕಲ್ಪಿಸಿದೆ?
೩. ಹಾಗಿದ್ದರೆ ಭೇದವನ್ನು ಸೂಚಿಸುವ ಕೆಲವೇ ಕೆಲವು ದ್ವೈತ ಶ್ರುತಿಗಳು ಏಕೆ ಹೊರಟಿವೆ?ಎಂದು
ಕೇಳಬಹುದು.  ದ್ವೈತದಲ್ಲಿ ನಿಲ್ಲದೆ ಅದ್ವೈತವನ್ನು ಬೋಧಿಸುವುದಕ್ಕೆ
ಆಗುವುದಿಲ್ಲ. ಗುರುಶಿಷ್ಯ ಪರಂಪರೆಯೇ ಇಲ್ಲದೆ ಹೋದೀತು. ಗ್ರಂಥರಚನೆಯೇ
ಅಶಕ್ಯವಾದೀತು. 'ಸರ್ವವೂ ಆತ್ಮ' ಎಂದು ತಿಳಿಸಿಕೊಡುವಾಗ ಸರ್ವವೆಂಬ
ಈ ಜಗತ್ತನ್ನು ಕೈಮಾಡಿ ತೋರಿಸಲೇಬೇಕಲ್ಲವೆ? ಲೋಕಸಿದ್ಧವಾದ ದ್ವೈತವನ್ನು
ಅನುವಾದಿಸಿ ಅನಂತರ ಅದನ್ನು ನಿಷೇಧಿಸಬೇಕಾಗುತ್ತದೆ. 'ಅಸತ್ಯೇ ವರ್ತನಿ
ಸ್ಥಿತ್ವಾ ತತಃ ಸತ್ಯಂ ಸಮೀಹತೇ', ಅಸತ್ಯ ಮಾರ್ಗದಲ್ಲಿ ನಿಂತು ಸತ್ಯವನ್ನು
ಶೋಧಿಸತೊಡಗಬೇಕಾಗುತ್ತದೆ. ಇದು ಭರ್ತೃಹರಿಯ ಮಾತು.

ಅಧ್ಯಾರೋಪಾಪವಾದ ನ್ಯಾಯದ ಸಾರಾಂಶವೇ ಇದು. ಶ್ರುತಿಯು ಎಲ್ಲಿಯೂ
ಅಭೇದವನ್ನು ನಿಷೇಧಿಸಿಲ್ಲ. ಆದರೆ ನೂರಾರು ಕಡೆ ಭೇದವನ್ನು ನಿಷೇಧಿಸಿದೆ.ಪುರಾಣಾದಿಗಳೂ ಕೂಡ ನೇರವಾದ ದ್ವೈತ ಎನ್ನುವ ಶಬ್ದವನ್ನು ಬಳಸಿಯೇ ನಿಂದಿಸಿದೆ .

೪. ಆತ್ಮಜ್ಞಾನಿಗಳ ಅನುಭವವೂ ಸಹ ಏಕತ್ಮವಾದಕ್ಕೆ ಪ್ರಮಾಣ, ಸಮಸ್ತ ಪ್ರಾಣಿಗಳು
ತಾವು ಯಾರೆಂಬ ಸತ್ಯವನ್ನು ತಿಳಿಯದಿದ್ದರೂ ಸ್ವತಃ ಬ್ರಹ್ಮ ಸ್ವರೂಪವಾಗಿಯೇ
ಇರುತ್ತವೆ. 'ನಾನ್ಯೋತೋsಸ್ತಿ ದೃಷ್ಟಾ' ಇತ್ಯಾದಿ ಶ್ರುತಿಗಳು ಇದಕ್ಕೆ ಪ್ರಮಾಣ.
"ಏಕವಿಜ್ಞಾನೇನ ಸರ್ವಂ ವಿಜ್ಞಾತಂ ಭವತಿ" ಏಕವಿಜ್ಞಾನದಿಂದ ಸರ್ವವನ್ನೂ ತಿಳಿಯಲಾಗುತ್ತದೆ' ಇತ್ಯಾದಿ ವೇದಾಂತ
ವಾಕ್ಯಗಳು ದ್ವೈತ ಪಕ್ಷದಲ್ಲಿ ಸಂಗತವಾಗುವುದಿಲ್ಲ. ಸರ್ವವೂ ಆತ್ಮವೇ ಎಂಬ
ಜ್ಞಾನ ಯಾರಿಗೆ ಹುಟ್ಟುತ್ತದೆಯೋ ಅವನಿಗೆ ಕಾಮನೆಗಳು ಇರುವುದಿಲ್ಲ.
ಇನ್ನೊಂದು ವಸ್ತುವಿದೆಯೆಂದು ತಿಳಿದಾಗಲ್ಲವೆ ಅದು ಬೇಕು ಎಂಬ ಕಾಮನೆ
ಹುಟ್ಟುವುದು? ತಾನೇ ಬೇಕೆಂದು ಕಾಮನೆ ಹುಟ್ಟುವುದಿಲ್ಲ. ಪ್ರಾಚೀನ ಸಮಸ್ತ
ವೇದಾಂತಿಗಳೂ ಉಪನಿಷತ್ತುಗಳಲ್ಲಿ ಜೀವಾತ್ಮ ಪರಮಾತ್ಮರ
ಐಕ್ಯಬೋಧನೆಯೆಂದು ಒಪ್ಪಿದ್ದಾರೆ. ಅದನ್ನು ತಿಳಿಯುವ ವಿಧಾನ
ಹೇಗೆಂಬುದರಲ್ಲಿ ಮಾತ್ರ ಪ್ರಾಚೀನ ವೇದಾಂತಿಗಳಲ್ಲಿ ಮತಭೇದ ವಿತ್ತು.ಅನ್ಯ ದರ್ಶನಶಾಸ್ತ್ರಗಳ ಪೂರ್ವ ಪಕ್ಷದಲ್ಲಿಯೂ ಕೂಡ ವೇದಾಂತವೆಂದು ಪೂರ್ವ ಪಕ್ಷವಾಗಿ ಅನುವಾದಿಸಿದ್ದು  ಅದ್ವೈತ ಸಿದ್ಧಾಂತ ವನ್ನೇ! ಅಲ್ಲಿಗೆ
ವೇದಾಂತವೆಂದರೆ ಅದೈತ ದರ್ಶನವೇ ಎಂದು ಸಿದ್ಧವಾಗುತ್ತದೆ. ಈ ವೈದಿಕ
ಸಿದ್ಧಾಂತವೇ ಸಮ್ಯಗ್‌ದರ್ಶನ. ಇದೇ ಔಪನಿಷದ ದರ್ಶನವೆಂದು ಶಂಕರಾಚಾರ್ಯರ ಮತ್ತು ಅವರ ಪೂರ್ವಿಕರೆಲ್ಲರ
ಸಿದ್ಧಾಂತ.

ನಿರ್ಗುಣಬ್ರಹ್ಮವೇ ಮೋಕ್ಷಕ್ಕೆ ಕಾರಣ

ಪ್ರತ್ಯಸ್ತಮಿತಭೇದಂ ಯತ್ಸತ್ತಾಮಾತ್ರಗೋಚರಮ್।
ವಚಸಾಮಾತ್ಮಸಂವೇದ್ಯಂ ತಜ್ಜ್ಞಾನಂ ಬ್ರಹ್ಮಸಂಜ್ಞಿತಮ್  ॥
ತಚ್ಚ ವಿಷ್ಣೋಃ ಪರಂ ರೂಪಮರೂಪಾಖ್ಯಮನುತ್ತಮಮ್ । ವಿಶ್ವಸ್ವರೂಪವೈರೂಪ್ಯಲಕ್ಷಣಂ ಪರಮಾತ್ಮನಃ ॥ ( ವಿಷ್ಣು ಪುರಾಣ 6.7. 53-54)
 ಯಾವುದರಲ್ಲಿ  ಸಮಸ್ತಭೇದವೂ ಲಯಿಸಿಹೋಗಿವೆಯೋ  ಯಾವುದು ಸತ್ತಾಮಾತ್ರಸ್ವರೂಪವಾಗಿದ್ದು ಮಾತುಗಳಿಗೆ ಅಗೋಚರವಾಗಿದೆಯೋ ಸ್ವಾನುಭವಮಾತ್ರಗಮ್ಯವಾಗಿದೆಯೋ ಆ ಜ್ಞಾನಕ್ಕೆ "ಬ್ರಹ್ಮ" ಎಂದು ಹೆಸರು . ಅದು ರೂಪರಹಿತವೂ ಪರಮಶ್ರೇಷ್ಠವೂ ಆದ  ವಿಷ್ಣುವಿನ ಪರವೆಂಬ ಸ್ವರೂಪವಾಗಿದೆ. ವಿಶ್ವರೂಪಕ್ಕಿಂತ ವಿಲಕ್ಷಣವಾಗಿರುವುದೇ ಪರಮಾತ್ಮನ ಆ ಪರ ಸ್ವರೂಪದ ಲಕ್ಷಣ. 

ಇಲ್ಲಿಯೂ ಅದ್ವೈತದಲ್ಲಿ ಹೇಳುವ ಪರಬ್ರಹ್ಮಸ್ವರೂಪದ  ವಿವರಣೆ ಸ್ಪಷ್ಟವಾಗಿ ತೋರುತ್ತದೆ. ವ್ಯಾಸರು ವಿಷ್ಣು ಪುರಾಣವನ್ನು ಸಗುಣಪರಮಾತ್ಮನ ಗುಣಕಥನಗಳಿಗೇ ಹೆಚ್ಚು ಒತ್ತುಕೊಟ್ಟುರಚಿಸಿದ್ದಾದರೂ ಪರಮಾತ್ಮನ ಸ್ವರೂಪವಿವರಣೆಯಲ್ಲಿ  ಮರೆಯದೇ ನಿರ್ಗುಣ ಸಗುಣರೂಪಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದಲ್ಲದೇ ಆ ಪರತತ್ವವಾದ ನಿರ್ಗುಣರೂಪವನ್ನು "ಬ್ರಹ್ಮ "ಎಂದೇ ಕರೆಯಲ್ಪಟ್ಟಿದೆ..  ಅದಕ್ಕಾಗಿ ಬ್ರಹ್ಮಸೂತ್ರದಲ್ಲಿ ಕೂಡ  "ಅಥಾತೋ ಬ್ರಹ್ಮಜಿಜ್ಞಾಸಾ"  ಎಂದೇ ಹೇಳಲ್ಪಟ್ಟಿದೆ.  ಅದಕ್ಕಾಗಿಯೇ ಆಚಾರ್ಯ ಶಂಕರರು ಕೂಡ "ಬ್ರಹ್ಮನ್"ಎನ್ನುವ ಶಬ್ದಕ್ಕೆ ವಿಷ್ಣು  ಶಿವ ಇತ್ಯಾದಿ ಸಗುಣಪರಮಾತ್ಮನ ಹೆಸರನ್ನು ಆರೋಪಿಸದೇ ವಿವರಿಸಿದ್ದಾರೆ . ಅದಲ್ಲದೇ ಉಪನಿಷತ್ತುಗಳಲ್ಲಿ ಕೂಡ ಎರಡು ವಿಧವಾದ ಪರಮಾತ್ಮನನ್ನು ತಿಳಿಸುವ ವಾಕ್ಯಗಳು ಕಾಣಸಿಗುತ್ತವೆ.  ಅವುಗಳೆಲ್ಲದರ ಸ್ಪಷ್ಟತೆಗಾಗಿ ಪರಮಾತ್ಮನ ಸ್ವರೂಪಗಳು ಯಾವುದೆಂದು ತಮ್ಮ  ಬ್ರಹ್ಮಸೂತ್ರಭಾಷ್ಯದಲ್ಲಿ ಹೀಗೆ ವಿವರಿಸಿದ್ದಾರೆ.

"ದ್ವಿರೂಪಂ ಹಿ ಬ್ರಹ್ಮ ಅವಗಮ್ಯತೇ | ನಾಮರೂಪವಿಕಾರಭೇದೋಪಾದಿವಿಶಿಷ್ಟಮ್, ತದ್ವಿಪರೀತಂ ಚ ಸರ್ವೋಪಾಧಿವರ್ಜಿತಮ್ | "
(ಬ್ರಹ್ಮಸೂತ್ರ #ಶಂಕರಭಾಷ್ಯ  ಅಧ್ಯಾಯ ೧-ಪಾದ ೧-ಅಧಿಕರಣ ೬ - ಸೂತ್ರ ೧೨)
 ಒಂದು ನಾಮ , ರೂಪಗಳೆಂಬ ವಿಕಾರ ಭೇದದಿಂದ ಪರಮಾತ್ಮನನ್ನು ತಿಳಿಸುವ ವಾಕ್ಯಗಳು ಮತ್ತು ನಾಮ ,ರೂಪ ವಿಕಾರಭೇದಗಳಿಲ್ಲದ  ನಿರಾಕಾರವು, ನಿರ್ಗುಣವೂ, ನಿರ್ವಿಶೇಷವೂ ಆದ ಪರಮಾತ್ಮನನ್ನು ಪ್ರತಿಪಾದಿಸುವವುಗಳು....
ಅದರಲ್ಲಿ ನಿರ್ವಿಶೇಷವಾದ ಆತ್ಮತತ್ವವೇ ಅತ್ಯಂತ ಪ್ರಧಾನವಾದದ್ದು.ಮತ್ತು ಪಡೆಯಬೇಕಾದದ್ದು..ನಾಮ,ರೂಪ ಗುಣವಿಶಿಷ್ಟವಾದವುಗಳು ಅಂದರೆ ಸಗುಣಬ್ರಹ್ಮವು ಉಪಾಸನೆಗಾಗಿ ಮಾತ್ರ ಹೇಳಿರುವವುದು..ಪರಮಾರ್ಥವಾಗಿ ನಾಮ,ರೂಪಗಳು ಸತ್ಯವಾದವುಗಳಲ್ಲ ಅವು ಮಿಥ್ಯಾಭೂತವಾದವುಗಳು..ಆದರೂ ಅವುಗಳನ್ನು ವೇದ ಹೇಳಿರುವುದು ಉಪಾಸಕನಿಗೆ ಅವುಗಳಲ್ಲಿ ಮನಸ್ಸನ್ನು ನಿಲ್ಲಿಸಿ ಉಪಾಸನೆ ಮಾಡುವುದಕ್ಕೆ ಸಹಕಾರಿಯಾಗಿ ಚಿತ್ತಶುದ್ಧಿಯುಂಟಾಗಲಿ ಎಂದು. ಮತ್ತು ಸಾಧಕರಿಗೆ  ಅದು ಸುಲಭ ಮಾರ್ಗ ಕೂಡಾ. ಆದರೆ ಅಂತಿಮವಾಗಿ  ಪರಮಲಕ್ಷ್ಯವಾದ ನಿರ್ಗುಣಬ್ರಹ್ಮಾನುಭವವೇ ಮೋಕ್ಷಕ್ಕೆ ಕಾರಣ ಎನ್ನುವುದನ್ನು ಮರೆಯಬಾರದು. 
....